11 Jan 2026

// //

ಗುದ್ನೇಶ್ವರ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಸರ್ಕಾರಿ ಕಟ್ಟಡ ಬೇಡ: ಗ್ರಾಮಸ್ಥರ ಪತ್ರ



ಕುಕನೂರು: ತಾಲೂಕಿನ ಗುದ್ನೇಶ್ವರಮಠದ (ಗುದ್ನೇಪ್ಪನಮಠ) ಸರ್ವೇ ನಂ 78ಕ್ಕೆ ಸಂಬಂಧಿಸಿದಂತೆ 1982 ರಲ್ಲಿ ಭೂ ನ್ಯಾಯ ಮಂಡಳಿ ರಾಯಚೂರು ಇವರ ಆದೇಶದ ಮೇರೆಗೆ ಗುದ್ನೇಶ್ವರಮಠದ ಸರ್ವೇ ನಂ 78 ರಲ್ಲಿ ಒಟ್ಟು 188 ಎಕರೆ ಜಮೀನಿನ ಪೈಕಿ 18 ಕುಟುಂಬಗಳ ಸೇವಾದಾರರಿಗೆ ಜಮೀನು ಮೀಸಲಿಟ್ಟಿದೆ. ಈ ಜಾಗದಲ್ಲಿ ಕುಕನೂರ ತಾಲೂಕಾಡಳಿತ ಕಚೇರಿ, ತಾಲೂಕು ನ್ಯಾಯಾಲಯ, ತಾಲೂಕು ಕ್ರೀಡಾಂಗಣ ಸೇರಿದಂತೆ ವಿವಿಧ ಸರ್ಕಾರಿ ಕಟ್ಟಡಗಳನ್ನು ಗ್ರಾಮಸ್ಥರು ಮತ್ತು 18 ಕುಟುಂಬಗಳ ಸೇವಾದಾರರ ವಿರೋಧದ ನಡುವೆ ನಿರ್ಮಾಣ ಮಾಡಲಾಗುತ್ತಿದೆ. ಸರ್ವೇ ನಂ 78 ರಲ್ಲಿ ಬರುವ 188 ಎಕರೆ ಜಾಗ ಗುದ್ನೇಶ್ವರ ದೇವಸ್ಥಾನದ ಆಸ್ತಿಯಾಗಿದೆ. 18 ಕುಟುಂಬಗಳ ಸೇವಾದಾರರಿಗೆ ಜಮೀನು ಮೀಸಲಿಟ್ಟಿದೆ.

ಈ ಜಾಗದಲ್ಲಿ ಯಾವುದೇ ಸರ್ಕಾರಿ ಇಲಾಖೆಗಳ ಕಚೇರಿ ಕಟ್ಟಡ ನಿರ್ಮಾಣ ಮಾಡಬಾರದೆಂದು ಗ್ರಾಮಸ್ಥರು ಹೋರಾಟ, ವಿರೋಧ ಮಾಡಿದ್ರು ಮತ್ತೇ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಕಟ್ಟಡ ನಿರ್ಮಾಣ ಮಾಡಲು ಮುಂದಾಗುತ್ತಿರುವುದು ಮತ್ತು ಜಾಗ ಗುರುತಿಸುವುದು ನಕಾಶೆಗಳನ್ನು ಬಿಡುತ್ತಿರುವುದು ಅಲ್ಲದೇ ಬಾಡಿಗೆ ಪಡೆಯುವ ರೂಪದಲ್ಲಿ ಪ್ರಯತ್ನ ಮಾಡುತ್ತಿರುವುದಕ್ಕೆ ಗ್ರಾಮಸ್ಥರ ಆಕ್ರೋಶಗೊಂಡಿದ್ದಾರೆ. ಸರ್ವೇ ನಂ 78 ರ ಜಾಗದಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿರುವುದನ್ನು ತಡೆಯಬೇಕು ಮತ್ತು ಭೂ ನ್ಯಾಯ ಮಂಡಳಿ ರಾಯಚೂರು ಇವರ ಆದೇಶದಂತೆ 18 ಕುಟುಂಬಗಳ ಸೇವಾದಾರರಿಗೆ ಜಮೀನು ಬಿಟ್ಟು ಕೊಡಬೇಕು ಎಂದು ಗುದ್ನೇಶ್ವರಮಠ (ಗುದ್ನೇಪ್ಪನಮಠ) ಗ್ರಾಮಸ್ಥರು ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ, ಸಚಿವರಿಗೆ, ಶಾಸಕರಿಗೆ, ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ವೀರೇಶ ಧೂಪದಮಠ