11 Jan 2026

// //

ಸಂಭ್ರಮ ಸಡಗರದ ಗುದ್ನೇಶ್ವರ ಜಾತ್ರೆಗೆ ಹೋಗೋಣ ಬನ್ನಿ


ಪ್ರತಿವರ್ಷ ಹೊಸ್ತಿಲು ಹುಣ್ಣಿಮೆ ದಿನ ಕೊಪ್ಪಳ ಜಿಲ್ಲೆಯ ಕುಕನೂರ ಸಮೀಪದ ಗುದ್ನೇಶ್ವರಮಠದ (ಗುದ್ನೇಪ್ಪನಮಠ) ಗುದ್ನೇಶ್ವರನ ಜಾತ್ರೆ ನಡೆಯಲಿದ್ದು, ಡಿ.26 ರಂದು ಲಕ್ಷಾಂತರ ಭಕ್ತರ ಮಧ್ಯೆ ಸಂಭ್ರಮ ಸಡಗರದಿಂದ ಗುದ್ನೇಶ್ವರನ ಜಾತ್ರೆ ಆಚರಿಸಲಾಗುತ್ತಿದೆ. 12ನೇ ಶತಮಾನದ ಜಂಗಮರ ಕ್ಷೇತ್ರ, ಪುಣ್ಯ ಕ್ಷೇತ್ರ, ಪುಣ್ಯಭೂಮಿ ಗುದ್ನೇಶ್ವರಮಠದ ಗುದ್ನೇಶ್ವರ ಸ್ವಾಮಿ ಲಕ್ಷಾಂತರ ಭಕ್ತರ ಬೇಡಿಕೆ ಈಡೇರಿಸಿದ ಪವಾಡ ಪುರುಷ, ಆರಾಧ್ಯ ದೈವ ಗುದ್ನೇಶ್ವರ ಸ್ವಾಮಿ ಎಂದೇ ಭಕ್ತರ ಮನಸ್ಸಿನಲ್ಲಿ ಅಜರಾಮರರಾಗಿದ್ದಾರೆ. ಈ ಜಾತ್ರೆಯು ಕೊಪ್ಪಳ ಜಿಲ್ಲೆಯ ಎರಡನೇಯ ಅತಿ ದೊಡ್ಡ ಜಾತ್ರೆ ಎಂಬ ಪ್ರಸಿದ್ಧ ಪಡೆದಿದ್ದು. ಜಾತ್ರೆಯ ದಿನ ಎಲ್ಲಿ ನೋಡಿದರೂ ಜನವೇ ಜನ. ಕೊಪ್ಪಳ ಜಿಲ್ಲೆ ಸೇರಿದಂತೆ ಬೇರೆ-ಬೇರೆ ಜಿಲ್ಲೆಯ ಜನ ಅದರಲ್ಲೂ ವಿಶೇಷವಾಗಿ ಯಲಬುರ್ಗಾ,


ಕುಕನೂರು ತಾಲೂಕಿನ ಸುತ್ತಮುತ್ತಲಿನ ಗ್ರಾಮದ ಜನ ಎತ್ತಿನಗಾಡಿ, ಟ್ರಾಕ್ಟರ್, ಕಾರು, ಬೈಕ್ ಇನ್ನಿತರ ವಾಹನಗಳಲ್ಲಿ ಕುಟುಂಬ ಸಮೇತ ಜಾತ್ರೆ ನೋಡಲು ಬರುವುದೇ ಒಂದು ಸುಂದರ ಕ್ಷಣವಾಗಿದೆ. ಜಾತ್ರೆಯಲ್ಲಿ ಜೋಗಿಯರ ಅಂಗಡಿಯ ಸಾಲು ನೋಡಲು ಒಂದು ದಿನವೇ ಬೇಕು ನಾನಾ ಬಗೆಯ ಜೋಗಿಯರ ಅಂಗಡಿಗಳಲ್ಲಿ ಹಿರಿಯರು, ಮಹಿಳೆಯರು, ಮಕ್ಕಳ ಹಿಂಡೆ ಕಂಡು ಬರುತ್ತದೆ. ಅಂದ ಹಾಗೇ ಜಾತ್ರೆಯ ದಿನ ಗುದ್ನೇಶ್ವರಮಠ (ಗುದ್ನೇಪ್ಪನಮಠ) ಗ್ರಾಮದಲ್ಲಿ ಪ್ರತಿಯೊಬ್ಬರು ಬಣ್ಣ, ಬಣ್ಣದ ಹೊಸ ಬಟ್ಟೆಯನ್ನು ದಿನಕ್ಕೆ ಮೂರು ಬಾರಿ ತೊಟ್ಟು ಬದಲಾಯಿಸಿ ಜಾತ್ರೆಯನ್ನು ವಿಶೇಷವಾಗಿ ಆಚರಣೆ ಮಾಡುವುದುಂಟು. ಜಾತ್ರೆಯ ದಿನ ಬೆಳಗ್ಗೆ ಹರಕೆ ಹೊತ್ತ ಭಕ್ತರು ಗ್ರಾಮದ ಚೆನ್ನಮ್ಮ ದೇವಸ್ಥಾನದಿಂದ ಗುದ್ನೇಶ್ವರ ದೇವಸ್ಥಾನವರೆಗೆ ದಿಂಡು ನಮಸ್ಕಾರ ಹಾಕಿ,


ಭಕ್ತಿ ಸಮರ್ಪಿಸುತ್ತಾರೆ ಅಂದು ಸಾಯಂಕಾಲ 4 ಗಂಟೆಗೆ ಸರಿಯಾಗಿ ಗ್ರಾಮದ ಜನ ಬಿಳಿ ಬಟ್ಟೆ, ಹೆಗಲು ಮೇಲೆ ಕೆಂಪು ವಸ್ತ್ರ ಧರಿಸಿ, ಒಗ್ಗಟ್ಟಿನಿಂದ ಗುದ್ನೇಶ್ವರ ಮಠದಿಂದ ಗುದ್ನೇಶ್ವರ ಸ್ವಾಮಿಗಳ ಗದ್ದುಗೆ ಮಠಕ್ಕೆ ಶ್ರೀಗಳನ್ನು ಕರೆತರಲು ತೆರಳುತ್ತಾರೆ. ಅಲ್ಲಿರುವ ಗುದ್ನೇಶ್ವರ ಮಠದ ಪರಮ ಪೂಜ್ಯ ಶ್ರೀ ಪ್ರಭುಲಿಂಗ ದೇವರು ಅರ್ಶಿವಾದ ಪಡೆದು ನಂತರ ಎಲ್ಲರೂ ಸೇರಿ ಕಿರುಸಭೆ ನಡೆಸಿ, ಬಿನ್ನಾಳ ಬಸವೇಶ್ವರ ನಂದಿಕೋಲ ಬಂದ ಬಳಿಕ ಪ್ರಭುಲಿಂಗ ಸ್ವಾಮಿಗಳ ಅವರನ್ನು ಗುದ್ನೇಶ್ವರ ಮಠಕ್ಕೆ ಪಥ ಸಂಚಲನ ಮುಖಾಂತರ ಕರೆ ತರಲಾಗುತ್ತದೆ. ಪ್ರಭುಲಿಂಗ ಶ್ರೀಗಳು ಗುದ್ನೇಶ್ವರ ಗದ್ದುಗೆ ನಮಸ್ಕರಸಿ, ಬಿನ್ನಾಳ ಬಸವೇಶ್ವರ ನಂದಿಕೋಲ ಬಂದ ಬಳಿಕ


ಸುಮಾರು 50ಕ್ಕೂ ಅಧಿಕ ದೀವಟಿಗೆ ಸಹಿತ ಗುದ್ನೇಶ್ವರ ಸ್ವಾಮಿಯ ಪಲಕ್ಕಿ, ಅಳಿಯ ಚನ್ನಬಸವೇಶ್ವರ ಪಲಕ್ಕಿ ರಥದ ಕಡೆ ಸಾಗುತ್ತದೆ, ರಥಕ್ಕೆ ಗುದ್ನೇಶ್ವರ ಸ್ವಾಮಿಯ ಪಲಕ್ಕಿ, ಅಳಿಯ ಚನ್ನಬಸವೇಶ್ವರ ಪಲಕ್ಕಿ, ದಿವಟಿಗೆ ಹಿಡಿದವರು ಐದು ಬಾರಿ ರಥವನ್ನೂ ಸುತ್ತುವರಿದು, ರಥಕ್ಕೆ ಪೂಜೆ ಸಲ್ಲಿಸಿ, ಮಂಗಳಾರತಿ ಪೂರೈಸಿದ ಮೇಲೆ ರಥವನ್ನು ಎಳೆಯಲು ಪ್ರಾರಂಭಿಸಲಾಗುತ್ತದೆ. ರಥದ ಎಡ-ಬಲಕ್ಕೆ ದೀವಟಿಗೆ ಹಿಡಿದವರು ಸರತಿ ಸಾಲಿನಲ್ಲಿ ನಿಂತರೆ, ಗುದ್ನೇಶ್ವರ ಪಲಕ್ಕಿ, ಅಳಿಯ ಚನ್ನಬಸವೇಶ್ವರ ಪಲಕ್ಕಿ, ಬಿನ್ನಾಳ ಬಸವೇಶ್ವರ ನಂದಿಕೋಲ ರಥದ ಮುಂದೆ ಸಾಗುತ್ತದೆ. ಲಕ್ಷಾಂತರ ಭಕ್ತರು ಬಾಳೆಹಣ್ಣು, ಉತ್ತತಿ ರಥಕ್ಕೆ ಸಮರ್ಪಿಸುತ್ತಾರೆ.


ರಥ ಸಾಗಿ ಪಾದಗಟ್ಟಿ ದರ್ಶನ ಪಡೆದು, ಮರಳಿ ರಥ ಹಿಂದಿರುಗಿದ ಮೇಲೆ ಕರಡಿ ಮಜಲು ಮತ್ತು ಭಜನೆ ಮುಖಾಂತರ ಗುದ್ನೇಶ್ವರ ಪಲಕ್ಕಿ, ಅಳಿಯ ಚನ್ನಬಸವೇಶ್ವರ ಪಲಕ್ಕಿ, ಬಿನ್ನಾಳ ಬಸವೇಶ್ವರ ನಂದಿಕೋಲ, ದೀವಟಿಗೆ ಹಿಡಿದವರು, ಗುದ್ನೇಶ್ವರ ಮಠದ ಹೊರಗೆ ಒಂದು ಸುತ್ತು ಗುದ್ನೇಶ್ವರ ಮಠದ ಒಳಗೆ ಐದು ಸುತ್ತು ತಿರುಗಿ, ಐದು ಸಲ ಮಂಗಳಾರತಿ ಪೂರೈಸಿ ಗುದ್ನೇಶ್ವರ ಜಾತ್ರೆಯನ್ನು ಆಚರಿಸಲಾಗುತ್ತದೆ. ಜಾತ್ರೆ ಹಿಂದಿನ ದಿನ ಹಿರೇಹುಚ್ಚಯ್ಯ ರಥ ಜರುಗಿ, ಗುದ್ನೇಶ್ವರ ಜಾತ್ರೆ ಮರುದಿನ ಕಡುಬಿನ ಕಾಳಗ ಕಾರ್ಯಕ್ರಮ ನಡೆಸಲಾಗುತ್ತದೆ. ವಿಶೇಷವೆಂದರೆ ಹೊಸದಾಗಿ ಮದುವೆಯಾದ ಜೋಡಿಗಳು ಗುದ್ನೇಶ್ವರ ಜಾತ್ರೆ ನೋಡಬೇಕು ಎಂಬ ಲೋಕ ರೂಡಿ ಇರುವುದಲ್ಲದೇ


ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಗುದ್ನೇಶ್ವರ ಜಾತ್ರೆ ಭರ್ಜರಿಯಾಗಿ ಜರುಗುವುದೂ. ಡಿಸೆಂಬರ್ 26 ರಂದು ಜಾತ್ರೆಗೆ ಆಗಮಿಸುವ ಸದ್ಭಕ್ತರಿಗೆ ಹಾರ್ದಿಕ ಸುಸ್ವಾಗತ


ವೀರೇಶ ಧೂಪದಮಠ