
ಕೆಲವು ದಿನಗಳ ಹಿಂದೆ ಪತ್ರಿಕೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದ ಸಂಗಪ್ಪ ವರ್ಸಸ್ ಮಲ್ಲಪ್ಪ ಜಾಹಿರಾತು ನೋಡಿ ನಸುನಕ್ಕು. ಉದ್ಯೋಗ ಖಾತ್ರಿ ಯೋಜನೆ ಅನುಕೂಲಕ್ಕಿಂತ ದುರುಪಯೋಗ ಭ್ರಷ್ಟಾಚಾರ ಆಗಿದ್ದೆ ಹೆಚ್ಚು. ಸರ್ಕಾರಗಳು ಸಾರ್ವಜನಿಕರಿಗೆ ಅನುಕೂಲವಾಗಲಿ ಎನ್ನುವುದುಕೋಸ್ಕರ ಹಲವು ಯೋಜನೆಗಳು, ಕಾಯ್ದೆಗಳು ರಚನೆ ಮಾಡುತ್ತಿವೆ. ಆದರೆ ಆ ಯೋಜನೆ, ಕಾಯ್ದೆಗಳು ದುರುಪಯೋಗವಾಗುತ್ತಿದೆ. ಅಲ್ಲದೇ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಹೇಳುವುದಾದರೆ ಹಳೆ ಕಲ್ಲು ಹೊಸ ಬಿಲ್ಲು ಅಷ್ಟೇ ಗ್ರಾಮ ಪಂಚಾಯತ್ ಎಲ್ಲ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ? ಎನ್ನುವಂತಾಗಿದೆ. ಸಾಕಷ್ಟು ಗ್ರಾಮಗಳು 15,000ಕ್ಕೂ ಮೇಲ್ಪಟ್ಟ ಜನಸಂಖ್ಯೆ ಮೀರಿದರು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬೇಕಾಗಿತ್ತು.
ಆದರೆ ಉದ್ಯೋಗ ಖಾತ್ರಿ ಯೋಜನೆ ತಪ್ಪುತ್ತದೆ ಎಂಬ ಮನೋಭಾವನೆಯಿಂದ ತಕರಾರು ತೆಗೆದು ಸರ್ಕಾರ ಮೇಲ್ದರ್ಜೆಗೇರಿಸುವುದನ್ನು ತಪ್ಪಿಸಿರುತ್ತಾರೆ. ಅಲ್ಲದೇ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿದರು ಅಧಿಕಾರಿಗಳು ಮಾಹಿತಿ ನೀಡುವುದಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಉದ್ಯೋಗ ಖಾತ್ರಿ ಯೋಜನೆ ಒಂದಿಲ್ಲೊಂದು ಸುದ್ದಿಯಲ್ಲಿದೆ. ಉದ್ಯೋಗ ಖಾತ್ರಿ ಯೋಜನೆ ಬದಲಾಗಿ ಪರ್ಯಾಯವಾಗಿ ಪಟ್ಟಣ ಪಂಚಾಯತ್ ಮಾದರಿ ಅನುದಾನ ಗ್ರಾಮ ಪಂಚಾಯಿತಿಗೆ ಒದಗಿಸಲು ರಾಜ್ಯ ಕೇಂದ್ರ ಸರ್ಕಾರ ಚಿಂತನೆ ನಡೆಸಬೇಕು.